Wednesday, November 27, 2013

" ಬಿಳಿ ಪಂಚೆ ದೇವರಣ್ಣನ " ಮಗಳು .... ಪ್ರಕಾಶನಿಗೆ ಲವ್ ಮಾಡಿಬಿಟ್ಳಂತೆ .. !

ಸಿರ್ಸಿ ಕಾಲೇಜಿಗೆ ಹೋಗುವಾಗ ನಡೆದದ್ದು....

ಪಿಯೂಸಿಯಲ್ಲಿ ಫೇಲಾಗಿ.. 
ಒಂದು ವರ್ಷ ಅಣ್ಣನೊಂದಿಗೆ ತೋಟದಲ್ಲಿ ಕೆಲಸ ಮಾಡಿದ್ದು..
ನಿಜವಾದ ಸ್ನೇಹಿತರ್ಯಾರು..?
ನಾವು ಬಿದ್ದಾಗ ನಗುವವರು ಯಾರು ? ..
ಎಲ್ಲ ಗೊತ್ತಾಗಿತ್ತು... 

ಪ್ರಪಂಚದ  ಬಣ್ಣಗಳು ಗೊತ್ತಾಗತೊಡಗಿದವು... .

ಫೇಲಾಗಿ..
ಆದ ಅವಮಾನ.. ಹೀಯಾಳಿಕೆ ಕೇಳಿ ಕುಗ್ಗಿ ಹೋಗಿದ್ದೆ..

ಮತ್ತೆ ಓದುವ ಅವಕಾಶ ಸಿಕ್ಕಿತಲ್ಲ.. !
ಛಲದಿಂದ ಓದುತ್ತಿದ್ದೆ...

ಸಿರ್ಸಿ ರಾಯ್ಕರ್ ಬಿಲ್ಡಿಂಗಿನಲ್ಲಿ ನಮ್ಮ ವಾಸ..
ನಿತ್ಯ 
ನಾಷ್ಟ ಮಾಡಿ.. ಮಧ್ಯಾಹ್ನಕ್ಕೂ ಅಡಿಗೆ ಮಾಡಿ ಹೋಗಬೇಕಿತ್ತು..

ತಿಂಗಳಿಗೆ ರೂಮಿನ ಬಾಡಿಗೆ ಖರ್ಚೂ ಸೇರಿ ನೂರಿಪ್ಪತ್ತು ರೂಪಾಯಿ...
ಅದೂ ಕೂಡ ಆಗ ಬಹಳ ದೊಡ್ಡ ಮೊತ್ತವಾಗಿತ್ತು...

ಅಂದು...
ಎಂದಿನಂತೆ ಕಾಲೇಜಿಗೆ ಹೊರಟಿದ್ದೆ..

ದಾರಿಯಲ್ಲಿ ಗೆಳೆಯರು ಸಿಕ್ಕರು..

ಒಬ್ಬರೂ ಮಾತನಾಡಿಲ್ಲ..
ಒಂದು ಮುಗುಳ್ನಗೆಯೂ ಇಲ್ಲ  !

ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜಿನ ಹೆಣ್ಣು ಮಕ್ಕಳು ಸಿಕ್ಕರು..

ನಾನು .. 
ಆಗಿನಿಂದಲೂ ಸಾರ್ವತ್ರಿಕವಾಗಿ "ಪ್ರಕಾಶಣ್ಣ"ನಾಗಿದ್ದರಿಂದ..
ಎಲ್ಲ ಹೆಣ್ಣುಮಕ್ಕಳೂ ಸಲುಗೆಯಿಂದ ಮಾತನಾಡುತ್ತಿದ್ದರು..

ಅಂದು ಮುಖ ತಿರುಗಿಸಿಕೊಂಡು ಹೋದರು !

ಏನಾಯ್ತು ?...  !!!!!!.......

ಸ್ವಲ್ಪ ಗೊಂದಲಕ್ಕೆ  ಬಿದ್ದೆ..

ಕಾಲೇಜಿಗೆ ಬಂದೆ...  ಕ್ಲಾಸ್ ಶುರುವಾಗಿತ್ತು..
ಅಲ್ಲೂ ಸಹ ಯಾರೂ ನನ್ನೊಡನೆ ಮಾತನಾಡುತ್ತಿಲ್ಲ...

ಪ್ರಿನ್ಸಿಪಾಲರ ಕ್ಲಾಸ್ ಆಗಿತ್ತು..

ಕ್ಲಾಸ್ ಮುಗಿದು ಹೋಗುವಾಗ ... 
ಚಶ್ಮದೊಳಗಿನಿಂದ ಕೆಂಗಣ್ಣು  ಬೀರಿದರು .. 

"ಪ್ರಕಾಶ್.. ನನ್ನ ಛೇಂಬರಿಗೆ ಬಾ.."

ಹುಡುಗರೆಲ್ಲ ಒಂಥರಾ ನೋಡಿ ಮುಸಿ ಮುಸಿ ನಗುತ್ತಿದ್ದರು...

ಎನ್. ಎನ್. ರಾಯಸದ್  ಪ್ರಿನ್ಸಿಪಾಲರು..

ಅವರಿಗೆ ನನ್ನನ್ನು ಕಂಡರೆ  ಪ್ರೀತಿ..
ಲೈಬ್ರರಿಯಿಂದ ಪುಸ್ತಕ ಒದಗಿಸುತ್ತಿದ್ದರು..
ಪುಸ್ತಕಕ್ಕಾಗಿ ಹಣದ ತೊಂದರೆ ಇತ್ತು..

ಅವರ ಛೇಂಬರಿಗೆ ಹೋದೆ..

ನನ್ನನ್ನು ನೋಡಿದವರೆ ಕೋಪಗೊಂಡರು..

"ಏನೋ ಇದು  ?
ಒಳ್ಳೆಯ ಹುಡುಗ ಅಂದುಕೊಂಡಿದ್ದೆ.. 
ಹೀಗೆ ಮಾಡ್ತೀಯಾ ಅಂತ ಗೊತ್ತಿರಲಿಲ್ಲ..

ಊರಲ್ಲಿ ನಿನ್ನಣ್ಣ ಎಷ್ಟು ಕಷ್ಟ ಪಡ್ತಿದ್ದಾನೆ ಅಂತ ಗೊತ್ತಿದೆಯಲ್ಲ..?

ಒಮ್ಮೆ ಎಡವಿ ಬಿದ್ದಿದ್ದು ಸಾಲದೇನು ?.."

" ಈಗ ಅಂಥಾದ್ದು  ಏನಾಯ್ತು ಸರ್..?..?"

"ಇನ್ನೇನು ಆಗಬೇಕಿದೆ ?
ಯಾವುದೋ ಹುಡುಗಿಗೆ ಪತ್ರ ಬರೆದಿರುವೆಯಂತಲ್ಲ.. !
ಛೇ....!"

"ಇಲ್ಲ.. ಸಾರ್.. 
ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲ.."

"ನಮ್ಮ ಕಾಲೇಜಿನ ಕಂಪೌಂಡ್ ಗೋಡೆಗಳನ್ನು ನೋಡು.. 
ಸತ್ಯ ಗೊತ್ತಾಗುತ್ತದೆ.."

ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ..

ಕುಗ್ಗಿ ಹೋದೆ...

ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲವಾಗಿತ್ತು..

ಕಾಲೇಜಿನ ಪೂರ್ತಿ ನನ್ನನ್ನು ಹೀಯಾಳಿಸುವವರೇ..
ಎಲ್ಲರ ಬಾಯಲ್ಲೂ ನನ್ನದೇ ಮಾತು....!

"ಪ್ರಕಾಶ  ಪ್ರೇಮ ಪತ್ರ ಬರೆದನಂತೆ...!!.. ."

ಕ್ಲಾಸಿನಲ್ಲಿ ಕುಳಿತುಕೊಳ್ಳುವ ಮೂಡ್ ಇಲ್ಲವಾಗಿತ್ತು..
ರೂಮಿಗೆ ಬಂದೆ..

ನಾಗು ಇದ್ದಿದ್ದ..

"ಪ್ರಕಾಶೂ.. ಏನೋ ಅದು..?
ಯಾವ ಹುಡುಗಿನೋ  ?"

ನನಗೆ ಮೈಯೆಲ್ಲ ಉರಿದು ಹೋಯಿತು..
ಕೋಪದಿಂದ ಅಳು ಬರುವಂತಾಯಿತು..

ನನ್ನನ್ನು ... ಕಷ್ಟಪಟ್ಟು ಓಡಿಸುತ್ತಿರುವ ಅಣ್ಣನಿಗೆ ಗೊತ್ತಾದರೆ ಎಷ್ಟು ನೊಂದುಕೊಂಡಾನು... !

ಛೇ...... !

ನಾಗು ನನ್ನನ್ನು ತಬ್ಬಿಕೊಂಡ.. ಸಮಾಧಾನ ಪಡಿಸಿದ..

ಕಷ್ಟ ಬಂದಾಗ... 
ತಪ್ಪಿ ಬೀಳುವಾಗ ... 
ಎಲ್ಲಿಂದ ಬರುತ್ತಾರೋ ನನ್ನ ಗೆಳೆಯರು.. ದೇವರ ಹಾಗೆ...!

"ಯಾರು ಈ ಸುದ್ಧಿ ಹರಡುತ್ತಿರುವವರು...?"

ಎಷ್ಟೇ ವಿಚಾರಿಸಿದರೂ "ಸುದ್ಧಿಯ ಮೂಲ" ಗೊತ್ತಾಗಲಿಲ್ಲ...

ಮಧ್ಯಾಹ್ನದ ಹೊತ್ತಿನಲ್ಲಿ ... 
ಗೆಳೆಯರೆಲ್ಲ ಊಟಕ್ಕೆ ತಯಾರಿ ಮಾಡುತ್ತಿದ್ದೇವು..

ಅಷ್ಟರಲ್ಲಿ ... 
ಒಬ್ಬರು ಬಹಳ ದರ್ಪದಿಂದ  ರೂಮಿನ ಒಳಗೆ ಬಂದರು..

"ಇಲ್ಲಿ ಪ್ರಕಾಶ ಅಂದರೆ ಯಾರು ?... "

"ನಾನು..."

"ಏನಪ್ಪಾ.. 
ಮನೆಯಲ್ಲಿ ಹಿರಿಯರು ಯಾರೂ ಇಲ್ವಾ ?

ನಿನಗೆ ಮಾಡಲಿಕ್ಕೆ ಬೇರೆ ಕೆಲಸ ಇಲ್ವಾ?.... 

ಪತ್ರ ಬರಿಲಿಕ್ಕೆ ನನ್ನ ಮಗಳೇ ಸಿಕ್ಕಳಾ ?
ನಮ್ಮಂಥವರ ಮನೆಯ ಹೆಣ್ಣು ಮಕ್ಕಳು ... 
ಮರ್ಯಾದೆಯಿಂದ ಕಾಲೇಜಿಗೆ ಹೋಗುವದು ಬೇಡವಾ.. ?"

ಸಿಕ್ಕಾಪಟ್ಟೆ ದೊಡ್ಡ ಧ್ವನಿಯಲ್ಲಿ ಕಿರುಚಾಡಿದರು..

ಕರಿ ಟೊಪ್ಪಿ.. 
ಬಿಳಿ ಅಂಗಿ.. ಬಿಳಿ ಪಂಚೆ.. 
ಒಳಗಡೆ 
ಪಟ್ಟೆ... ಪಟ್ಟೆ ಉದ್ದನೆಯ  ಅಂಡರವೇರ್... 

ಪಂಚೆಯ ತುದಿಯನ್ನು ಕೈಯಲ್ಲಿ ಹಿಡಿದು..
ಅದೇ ಕೈಯಲ್ಲಿ ಸಣ್ಣ ಬ್ಯಾಗು...

ಬಾಯಲ್ಲಿ ಎಲೆ ಅಡಿಕೆ....

"ನೀವ್ಯಾರು...?.."

" ನಾನು ಯಾರೂ ಅಂತ ಗೊತ್ತಿಲ್ವಾ ?...  !!.. "

" ಇಲ್ಲ... !.. "

" ನಾನು ಉಪಾಸಕೊಡ್ಳು ದೇವರು ಹೆಗಡೆ...!

"ಬಿಳಿ ಪಂಚೆ ದೇವರು ಹೆಗಡೆ"  ಅಂತ... !
ಸಿದ್ದಾಪುರ ತಾಲೂಕಿನ ಜಗತ್ತಿಗೆಲ್ಲ ಗೊತ್ತು... "

ನಾಗು ತಲೆ ಕೆರೆದು ಕೊಂಡ..

"ನಿಮ್ಮ ಹುಡುಗಿಯ ಹೆಸರೇನು?..
ಯಾವ ಕ್ಲಾಸು..?.."

ಈಗ..
ಅವರು ಭಯಂಕರ ರಾಕ್ಷಸರಾಗಿ ಹೋದರು... !

ಥೈ ಥೈ ಕುಣಿದಾಡಿಬಿಟ್ಟರು...!

"ಏನೂ ...... ?.... 
ನನ್ನ ಮಗಳ ಹೆಸರು ಗೊತ್ತಿಲ್ಲದಯೇ ಪತ್ರ ಬರೆದದ್ದಾ... ?

ನಾನು ಸುಮ್ಮನಿರ್ತೇನೆ ಅಂದುಕೊಳ್ಳಬೇಡಿ..!

ಪೋಲೀಸ್ ಕಂಪ್ಲೇಂಟ್ ಕೊಡ್ತೇನೆ...

"ಬಿಳಿ ಪಂಚೆ ದೇವರು ಹೆಗಡೆ"  ಅಂದ್ರೆ ಏನು ಅಂತ ಅಂದುಕೊಂಡಿದ್ದೀರಿ...?

ಚರ್ಮ ಸುಲಿಸಿ ಬಿಡ್ತೇನೆ...

ಈ ಬಡಕಲು ಹುಡುಗನಿಗೆ ...
ದುಡ್ಡು ಕೊಟ್ಟು ಪೋಲಿಸರಿಂದ ಹೋಡೆಸುತ್ತೇನೆ...

ಪತ್ರ ಬರಿತಾನಂತೆ.... ಪತ್ರ... !"

ಅವಮಾನದಿಂದ ಕುಗ್ಗಿ ಹೋಗಿದ್ದ ... 
ನನಗೆ ಈಗ ಹೆದರಿಕೆಯೂ ಶುರುವಾಯ್ತು...

ದಿವಾಕರ ಬುದ್ಧಿವಂತ..

" ನೋಡಿ .... 
ಬಿಳಿ ಪಂಚೆ ದೇವರು ಅಣ್ಣಾ... 

ನಮ್ ಹುಡುಗ ಪತ್ರ ಬರೆದಿಲ್ಲ..
ಅಂಥವನಲ್ಲ.. 
ಯಾರೋ..  ಮಾಡಿದ ಕಿತಾಪತಿ ಇದು..

ನೀವು ಪೋಲಿಸ್ ಕಪ್ಲೇಂಟು ಕೊಡುವದಾದರೆ ಕೊಡಿ..

ಆದರೆ ಮರ್ಯಾದೆ ಹೋಗುವದು ಯಾರದ್ದು ?.. 

" ಉಪಾಸಕೊಡ್ಳು ದೇವರಣ್ಣನ  ಮಗಳು .. 
ಪ್ರಕಾಶನ್ನ ಲವ್ ಮಾಡಿದ್ದಳಂತೆ"
ಎನ್ನುವದು  ಸಿರ್ಸಿ ಜಗತ್ತಿಗೇ ಗೊತ್ತಾಗುತ್ತದೆ..!

ಇದನ್ನು ತಾಳ್ಮೆಯಿಂದ ಬಗೆಹರಿಸಿಕೊಂಡರೆ ಒಳ್ಳೆಯದು..."

ಈಗ .... 
ಬಿಳೆ ಪಂಚೆಯವರು ಸ್ವಲ್ಪ ತಣ್ಣಗಾದರು..

ಕರಿ ಟೊಪ್ಪಿಯನ್ನು ತೆಗೆದುಕೊಂಡು.. 
ಅದರಿಂದ  ಗಾಳಿ ಹಾಕಿಕೊಂಡರು... 

ಏದುಸಿರು ಬಿಡುತ್ತ ಒಂದು ಗ್ಲಾಸ್ ನೀರು ಕುಡಿದರು..

"ಹೌದಲ್ವ .... 
ಹಾಗಾದರೆ ಏನು ಮಾಡೋಣ...?... 

ನಾನು ಸುಮ್ಮನಿದ್ದರೂ ನನ್ನ ಮಗ ಸುಮ್ಮನಿರಲ್ಲ..."

"ಯಾರೂ... ನಿಮ್ಮ ಮಗ...?.... "

"ಅಯ್ಯೋ..
ಇದೊಳ್ಳೇ ಫಜೀತಿ ಆಯ್ತಲ್ಲ..!

ನನ್ನ ಮಗನ ಪರಿಚಯವೂ ನಿಮಗೆ ಇಲ್ಲವಾ?.."

"ಇಲ್ಲ.... ! "

ನಮ್ಮ ಹುಬ್ಬುಗಳು ಮೇಲಕ್ಕೇರಿದವು  !

"ಅಯ್ಯೋ ರಾಮಾ...!

ನನ್ನ ಮಗ ಅಂದ್ರೆ ಭಯಂಕರ ಹುಲಿ..!,,.. 

ಕಾಡಿನಲ್ಲಿರೋ ಸಿಂಹ...!

ಮಹಾ ಒರಟ... ರೌಡಿ...!

ಉಪಾಸ್ ಕೊಡ್ಳು " ಕೇಡಿ ಹೆಗಡೇ" ಅಂದ್ರೆ  ಜನ ಉಚ್ಚೆ ಹೊಯ್ಕೋತಾರೆ..."

ನಮಗೆಲ್ಲರಿಗೂ ನಡುಕ ಶುರುವಾಯ್ತು..

"ನಿಮ್ಮ ಮಗ " ಕೇಡಿ "  ನಾ..?... "

"ಕೇಡಿ .... ಅಂದ್ರೆ ಕೇಡಿ ಅಲ್ಲ..

ಕೃಷ್ಣ ದೇವರು ಹೆಗಡೆ.. 
ಇಂಗ್ಲೀಷಿನಲ್ಲಿ " ಕೇಡಿ ಹೆಗಡೆ ".. ಅಂತ...

ಅವ ಸುಮ್ನೆ ಬಿಡೋದಿಲ್ಲ..

ಮೊನ್ನೆ ತಾನೆ ಪೋಲೀಸ್ ಠಾಣೆಗೆ ಹೋಗಿ ಬಂದಿದ್ದಾನೆ...

ನಿಮ್ಮನ್ನು ಭಗವಂತ ಬಂದ್ರೂ ಕಾಪಾಡಲಿಕ್ಕೆ ಸಾಧ್ಯ ಇಲ್ಲ..!.. "

ನಮಗೆ ಈಗ ನಿಜಕ್ಕೂ ಹೆದರಿಕೆ ಶುರುವಾತು....

ತಲೆಯೆಲ್ಲ ಕೆಟ್ಟು ಕೆರವಾಗಿ ಹೋಯ್ತು... !

" ಹುಡುಗಿ ಯಾರು ?

ಎಲ್ಲಿದ್ದಾಳೆ..?
ನೋಡಲಿಕ್ಕೆ ಚಂದ ಇದ್ದೀರಬಹುದಾ ?... 

ಹುಡುಗಿ ಯಾರು ಅಂತ ಗೊತ್ತಿಲ್ಲ.. 

ಅವಳ ಅಣ್ಣ  ರೌಡಿ..!... 

ಕೇಡೀ ಹೆಗಡೆಯನ್ನು ತಡೆಯುವದು ಹೇಗೆ ?... "


(ಇನ್ನೂ ಇದೆ............... )

ಪ್ರತಿಕ್ರಿಯೆಗಳನ್ನು ದಯವಿಟ್ಟು ಓದಿ... .........